Photo Credit: AI Gemini
life Lesson on Gratitude: ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಗಿಜುಗುಡುವ ಗದ್ದಲ,ಸದ್ದು.ನಾಳೆ ಗಣೇಶನ ಹಬ್ಬದ ಪ್ರಯುಕ್ತ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಹೊರಡುವ ಆತುರದಲ್ಲಿದ್ದರು.ಅದರಲ್ಲಿ ನಾನು ಗಮನಿಸಿದ ಒಂದು ದೃಶ್ಯ ನನ್ನನ್ನು ಭಾವುಕನನ್ನಾಗಿಸಿತು.
ನಾಲ್ಕು ಜನ ನಡೆದುಕೊಂಡು ಬರುತ್ತಿದ್ದರು. ಒಬ್ಬ ಸ್ಮಾರ್ಟ್ ಆಗಿ ಇನಶರ್ಟ್ ಮಾಡಿಕೊಂಡು ಕ್ಲಾಸ್ ಲುಕ್ಕಿನಲ್ಲಿದ್ದರೆ ಇನ್ನೊಬ್ಬ ಜಿನ್ಸ್ ಪ್ಯಾಂಟ್ ಮತ್ತು ಟೀ ಶರ್ಟನ್ನು ಹಾಕಿದ್ದ,ಮತ್ತೊಬ್ಬ ಅವರಿಬ್ಬರಷ್ಟೇ ಚೆಂದವಾಗಿ ಕಾಣುತ್ತಿದ್ದ.ಮೂವರನ್ನೂ ಕರೆದುಕೊಂಡು ಬಂದವನೊಬ್ಬ. ಏನೆಂದು ನೋಡುವಷ್ಟರಲ್ಲಿ ಗೊತ್ತಾಗಿದ್ದು ಆ ಮೂವರೂ ಕುರುಡರೆಂದು. ಹಬ್ಬದ ಮುನ್ನಾದಿನ ಮೆಜೆಸ್ಟಿಕ್ನಿಂದ ಪ್ರಯಾಣ ಮಾಡುವವರಿಗೆ ಮಾತ್ರ ಗೊತ್ತು ಅಲ್ಲಿ ಎಷ್ಟು ಗದ್ದಲವಿರುತ್ತದೆಂದು.ಅಂಥ ಗದ್ದಲದಲ್ಲಿ ಸಾಮಾನ್ಯ ಜನರಿಗೇ ಅರಳುಮರಳಾಗುವ ರಾಜ್ಯದ ರಾಜಧಾನಿಯ ಅತ್ಯಧಿಕ ಜನಸಾಂದ್ರತೆ ಆಗಲ್ಪಡುವ ರೈಲು ನಿಲ್ದಾಣದಲ್ಲಿನನ್ನ ಪಕ್ಕದಲ್ಲಿಯೇ ಬಂದು ನಿಂತುಕೊಂಡು ಮಾತನಾಡಲು ಶುರುಮಾಡಿದರು ಆ ನಾಲ್ಕು ಜನ.
ಇದನ್ನು ಓದಿ: ಐದು ವರ್ಷದ ನಂತರ ಆಕೆಯನ್ನು ಸಂಧಿಸಲು ಹೊರಟಿರುವೆ
ಜನ ಹೇಗೆಲ್ಲ ವಂಚಿಸುತ್ತಾರೆ ನೋಡು, ಕೇವಲ ಇಪ್ಪತ್ತೊ ಮೂವತ್ತು ರೂಪಾಯಿಗಳ ಮೊಬೈಲ್ ಚಾರ್ಜರ್ ಅನ್ನು ನೂರೈವತ್ತು ರೂಪಾಯಿಗೆ ಮಾರುತ್ತಾರೆ,ಬೆಂಗಳೂರಿನ ಒಬ್ಬ ಡಾಕ್ಟರ್ ಬಳಿ ಹೋದರೆ ನಾಲ್ಕ ಮಾತ್ರೆಗಳು ಸಾಕಾಗುವ ಸಂದರ್ಭದಲ್ಲಿ ಎಂಟು ಮಾತ್ರೆ ಬರೆಯುತ್ತಾರಂತೆ ಯಾಕಂದ್ರೆ ಡಾಕ್ಟರ್ ನದ್ದೇ ಔಷಧ ಅಂಗಡಿ’..ಹೀಗೆ ಸಾಗಿತ್ತು ಅವರ ಸಂಭಾಷಣೆ. ಅಷ್ಟರಲ್ಲಿ ರೈಲು ಬಂದಿತು. ಹತ್ತಬೇಕೆಂದರೆ ಜನಜಂಗುಳಿ. ಆದರೂ ಅವರನ್ನೇ ನೋಡುತ್ತ ನಿಂತೆ ನಾನು.ಮಹಿಳಾ ಬೋಗಿಗೆ ಹೋದರು ಆ ಮಿತ್ರರು, ಆದರೆ ಇತರೆ ಜನ ಕೂಡ ಅವರೊಂದಿಗೇ ಮಹಿಳೆಯರ ಬೋಗಿಗೆ ಹೋದ್ದರಿಂದ ಪೋಲಿಸ್ನವರು ಬಂದು ಎಲ್ಲರನ್ನೂ ಇಳಿಸಬೇಕಾಯಿತು.ಮುಂದೆ ಅವರು ಎಲ್ಲಿ ಹೇಗೆ ಕುಳಿತುಕೊಂಡು ಸಾಗುವರೋ ಏನೊ ಎಂದು ಸ್ವಲ್ಪ ಹೊತ್ತು ಯೋಚನೆಯಾಯಿತು.
ಇಷ್ಟೆಲ್ಲ ಸವಲತ್ತು ಇರುವ ನಮಗೂ ದೃಷ್ಟಿಯೇ ಇಲ್ಲದ ಅವರಿಗೂ ಎಷ್ಟೊಂದು ವ್ಯತ್ಯಾಸವಲ್ಲವ ಎನ್ನಿಸಿತು.”ಇರುವದೆಲ್ಲವ ನೆನೆದು ಬಾರೆನೆಂಬುದನು ಬಿಡು ಹರುಷಕ್ಕಿದೆ ನೂರು ದಾರಿ”(ಡಿ.ವಿ.ಜಿ)
ಎಲ್ಲ ಇರುವುಗಳ ಜೊತೆಗೆ ಉತ್ತಮವಾದ ಬದುಕನ್ನೇ ನಡೆಸುತ್ತಿದ್ದರೂ ಎಲ್ಲಕ್ಕೂ, ಎಲ್ಲರನ್ನೂ, ಎಲ್ಲದನ್ನೂ ದೂರುತ್ತ ಜೀವನ ಸಾಗಿಸುವ ನಾವು, ನಮಗೆ ಲಭ್ಯವಿರುವ ಸೌಲಭ್ಯಗಳನ್ನು ನಾವು ಗುರುತಿಸಿ ಅದನ್ನು ಕೊಟ್ಟ ಸೃಷ್ಟಿಕರ್ತನಿಗೆ ಒಂದು ಸಣ್ಣ ಧನ್ಯವಾದವನ್ನು ಕೂಡ ಹೇಳದಿದ್ದರೆ ಹೇಗೆ ?
ಮನುಷ್ಯ ಏನೇ ಮರೆತರೂ ಉಪಕಾರವನ್ನು ಮರೆಯಬಾರದು. ಆ ಸೃಷ್ಟಿಕರ್ತ ಇಷ್ಟೆಲ್ಲ ಕೊಟ್ಟ ನಮಗೆ ಯಾವುದೊ ಒಂದನ್ನು ಕೊಟ್ಟಿಲ್ಲವೆಂದು ಅವನನ್ನ ಹೀಗಳೆಯುವುದು ತಪ್ಪಲ್ಲವ!?.
ಇದನ್ನು ಓದಿ: The Last Word, the Last Meet: ಕೊನೆಯ ಮಾತು ಕಡೆಯ ಭೇಟಿ ಎಂದಿಗೂ ಜೀವಂತ
ಕನ್ನಡಕವಿಲ್ಲವೆಂದು ರೋಧಿಸುವರು ಕಣ್ಣಿಲ್ಲದವರನ್ನು ನೋಡಬೇಕು,ಕಾರಿಲ್ಲವೆಂದು ಗೋಳಿಡುವವರು ಕಾಲುಗಳಿಲ್ಲದವರನ್ನು ನೋಡಬೇಕು,ಐಷಾರಾಮಿ ಬಂಗಲೆ ಇಲ್ಲವೆಂದು ಕೊರಗುವವರು ಸೂರಿಲ್ಲದವರ ಜೀವನ ನೋಡಬೇಕು ಆಗ ತಿಳಿಯುತ್ತದೆ; ಸುಂದರವಾದ ಜೀವನದಲ್ಲಿ ಅತ್ಯಂತ ಸುಂದರವಾದ ಬದುಕನ್ನು ನಡೆಸಲು ನಮಗೆ ಅಗತ್ಯವಾಗಿ ಬೇಕಾದ ಎಲ್ಲ ಸಂಗತಿಗಳನ್ನು ಆ ಭಗವಂತ ಕೊಟ್ಟಿರುವಾಗ ನಾವು ಮನಸಾರೆ ಖುಷಿಯಿಂದ ಇರಬೇಡವೆ?.ಇರುತ್ತಾರೆ.ಕೆಲವೇ ಕೆಲವರು.ಅತಿ ಆಸೆ ಇಲ್ಲದ ತೃಪ್ತ ಜೀವಗಳು.ಈ ಹೊತ್ತಿನಲ್ಲಿ ಗೀತೆಯ ಸಾರವನ್ನು ನೆನೆಯುವುದು ಎಷ್ಟೊಂದು ಪ್ರಸ್ತುತ.
“ಆದದ್ದೆಲ್ಲ ಒಳ್ಳೆಯದಕ್ಕೆ ಆಗಿದೆ
ಆಗುವುದೆಲ್ಲ ಒಳ್ಳೆಯದೇ ಆಗುತ್ತಿದೆ
ಅಗಲಿರುವುದು ಅದೂ ಒಳ್ಳೆಯದೇ ಆಗಲಿದೆ
ರೋದಿಸಲು ನೀನೇನು ಕಳೆದುಕೊಂಡಿರುವೆ
ಕಳೆದುಕೊಳ್ಳಲು
ನೀನು ತಂದಿರುವುದಾದರೂ ಏನು?
ನಾಶವಾಗಲು
ನೀನು ಮಾಡಿರುದಾದರು ಏನು?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ
ಪಡೆದಿರುವೆ
ಏನನ್ನು ನೀಡಿದ್ದರೂ ಅದನ್ನು ಇಲ್ಲಿಗೇ ನೀಡಿರುವೆ
ನಿನ್ನೆ ಬೇರಾರದ್ದೋ ಆಗಿದ್ದದ್ದು
ಇಂದು ನಿನ್ನದಾಗಿದೆ ಮತ್ತು
ನಾಳೆ ಇನ್ನರದ್ದೋ ಆಗಲಿದೆ”.
ಪರಿವರ್ತನೆ ಜಗದ ನಿಯಮ.
ಇನ್ನೇಕೆ ತಡ. ಆ ಭಗವಂತನಿಗೊಂದು ಧನ್ಯವಾದ ಹೇಳುವ ಸಮಯವಿದು.ಹೇಳುವಿರಿ ತಾನೆ??
