(ಪತ್ರ ಹನ್ನೆರಡು)ಮಗಳೇ,
Letters to Daughter: ಮೊನ್ನೆ ನೀನಾಡಿದ ಮಾತುಗಳನ್ನೇ ಇನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ. ‘ಅಮ್ಮ, ನೀನು ಸಮಯದ ಜತೆಗೆ ಮುಂದೆ ಮುಂದೆ ಸಾಗುತ್ತಿಲ್ಲ. ಎಲ್ಲೋ ಒಂದೆಡೆ ನಿಲ್ಲುವ, ಸಮಯವನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತೀ. ಅದಕ್ಕೇ ನಿನಗೆ ಈ ಒತ್ತಡ, ತಲೆನೋವು ಎಲ್ಲ. ನೀನು ಚಿಕ್ಕವಳಿದ್ದಾಗ ಎಲ್ಲ ಹೇಗಿತ್ತೋ ಈಗಲೂ ಚಿಕ್ಕವರು ಹಾಗೆಯೇ ಇರುವುದು ಸಾಧ್ಯ ಇಲ್ಲ ಅಮ್ಮ. ಬದಲಾದುದನ್ನು ಒಪ್ಪಿಕೊ. ಬದಲಾಗುತ್ತಿರುವುದನ್ನು ಒಪ್ಪಿಕೋ.
ಇದನ್ನೂ ಓದಿ: Gowri Ganesha Festival: KSRTC ಯಿಂದ 1500 ವಿಶೇಷ ಬಸ್ ವ್ಯವಸ್ಥೆ, ಇಲ್ಲಿದೆ ವಿಶೇಷ ಬಸ್ಗಳ ಮಾರ್ಗಸೂಚಿ
ನಿನ್ನ ಸುತ್ತಲಿರುವವರೆಲ್ಲರೂ ನಾಟಕ ಮಾಡುತ್ತಾರೆ ಅನ್ನುವುದು ಅರಿವಾದ ಮೇಲೂ ಅವರಿಂದ ಪ್ರಾಮಾಣಿಕತೆ ನಿರೀಕ್ಷೆ ಮಾಡುವುದು ತಪ್ಪಲ್ಲವೇ ಹೇಳು? ಬದಲಾಗದೇ ಹೀಗೆಯೇ ಇರುತ್ತೇನೆ ಅಂದರೆ ನೀನೇ ನೋವನುಭವಿಸುತ್ತೀಯಾ..’ನನ್ನ ಮುದ್ದು ಕೂಸೇ..ನೀನೀಗ ನಿಜಕ್ಕೂ ನನ್ನ ಗೆಳತಿಯಾಗಿಬಿಟ್ಟೆ. ನನ್ನಲ್ಲಿ ‘ಬದಲಾಗಬೇಕು ನೀವು, ಕಾಲದೊಂದಿಗೆ ಚಲಿಸುತ್ತಾ ಇರಬೇಕು, ವರ್ತಮಾನದಲ್ಲಿ ಬದುಕಲು ಕಲಿಯಬೇಕು.
ಹಿಂದಿನದ್ದನ್ನು ನೆನೆದು ಕೊರಗುತ್ತಾ ಕೂತರೆ ಬದುಕು ವ್ಯರ್ಥವಾಗುತ್ತದೆ’ ಎಂದು ಹೇಳುತ್ತಲೇ ಬಂದ ಮಿತ್ರರು ಅನೇಕರು. ನಿಜವೇ ಮಗಳೇ, ಕೆಲವೊಂದು ಸಲ ಹಿಂದೊAದೋ ಆದ ನೋವು ಬೇಸರಗಳೆಲ್ಲ ನನಗೇ ಗೊತ್ತಿಲ್ಲದಂತೆ ನೆನಪಾಗಿ ಕಾಡುತ್ತವೆ. ಮೌನದ ಪೊಟರೆಯೊಳಗೆ ನಾನು ಕಳೆದುಹೋದಂತೆ ಅನ್ನಿಸುತ್ತದೆ. ಕಾಲದೊಂದಿಗೆ ಚಲಿಸುತ್ತಲೇ ಇರಬೇಕು ನಿಜ. ಆದರೆ ಹುಟ್ಟಿನೊಂದಿಗೆ ನಮ್ಮೊಂದಿಗೆ ಬಂದಿರುವ ಕೆಲವು ಗುಣಗಳಿವೆಯಲ್ಲ? ಅವುಗಳಿಂದ ಕಳಚಿಕೊಳ್ಳುವುದು ಬಲುಕಷ್ಟ ಮಗೂ. ಬಾಲ್ಯದಲ್ಲಿ ಮನದಲ್ಲಿ ಅಚ್ಚೊತ್ತಿದ ಕೆಲವು ಮೌಲ್ಯಗಳಿವೆಯಲ್ಲ, ಅವೆಲ್ಲವನ್ನೂ ಹಿಂದೆ ಬಿಟ್ಟು ಕಾಲದೊಂದಿಗೆ ಓಡಿದರೆ ನಾನು ನಾನಾಗಿ ಉಳಿಯುವುದು ಸಾಧ್ಯವೇ ಹೇಳಮ್ಮಾ?
ಇದನ್ನೂ ಓದಿ: India America Trade: ಅಮೇರಿಕಾದ ಸುಂಕದ ಬಿಸಿಗೂ ಮಣಿಯಾದ ಭಾರತ: ಎಲ್ಲಿ ಲಾಭವೂ ಅಲ್ಲೇ ವ್ಯವಹಾರ
ನನಗೆ ಕಸಿವಿಸಿಯೆನಿಸುವ ಕೆಲವು ಉದಾಹರಣೆಗಳನ್ನು ಹೇಳುತ್ತೇನೆ ಕೇಳು. ಮನೆಯಲ್ಲಾಗಲೀ ಕಾಲೇಜಿನಲ್ಲಾಗಲೀ ಎಳೆಯಮಕ್ಕಳು, ವಿದ್ಯಾರ್ಥಿಗಳು ಗುರುಗಳಿಗೆ ವಂದಿಸುವುದು ಕ್ರಮ. ಅದು ಶಿಷ್ಟಾಚಾರ. ಈಗೀಗ ಪರಿಸ್ಥಿತಿ ಹೇಗಿದೆ ಗೊತ್ತಾ? ಮಕ್ಕಳು ಕಾರಿಡಾರಿನಲ್ಲಿ ನಡೆದುಹೋಗುವಾಗ ನಾವು ಎದುರಾದರೆ ಒಂದು ಪರಿಚಯದ ನಗು ಬೀರುವ ಸೌಜನ್ಯವನ್ನೂ ಕೆಲವರು ತೋರುವುದಿಲ್ಲ. ಅಂಥ ಮಕ್ಕಳಿಗೆ ತರಗತಿಗೆ ಹೋಗಿ ಬೋಧಿಸುವಾಗ ನಮ್ಮಲ್ಲಿರುವ ಮೌಲ್ಯಗಳನ್ನು ಇವರೇಕೆ ಸ್ವೀಕರಿಸುತ್ತಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡದೇ ಇರಬೇಕೆಂದರೆ ಅದು ಸಾಧ್ಯವೇ? ಶಿಕ್ಷಕ ವೃಂದದವರ ನಡುವೆ ಪರಸ್ಪರ ನಮಸ್ಕಾರಗಳು ಕೂಡಾ ಕಳೆದುಹೋಗುತ್ತಿರುವ ದಿನಗಳಿವು. ಕೈ ಬೀಸಿ ಹಾಯ್ ಎನ್ನುವ ಅಭ್ಯಾಸ ಕೆಲವರಲ್ಲಿ ಇದೆ. ಮಕ್ಕಳು ಅದನ್ನೂ ಗಮನಿಸುತ್ತಾರೆ. ವಿದ್ಯಾರ್ಥಿಗಳ ಮುಂದೆ ಶಿಕ್ಷಕರು ಒಬ್ಬರನ್ನೊಬ್ಬರು ಏಕವಚನದಲ್ಲಿ ಕರೆಯುವ ಸಂಪ್ರದಾಯ ಹುಟ್ಟಿಕೊಂಡಿದೆ. ಹೀಗಿರುವಾಗ ಮಕ್ಕಳು ಉಪನ್ಯಾಸಕರನ್ನು ಏಕವಚನದಲ್ಲಿ ಸಂಭೋದಿಸುವ ದಿನಗಳೂ ದೂರವಿಲ್ಲವೇನೋ ಅನಿಸುತ್ತದೆ.
ಇಲ್ಲೇನಾಗಿದೆ ಗೊತ್ತಾ ಮಗೂ, ಪಾಶ್ಚಾತ್ಯ ಸಂಸ್ಕೃತಿಯAತೆ ಮಕ್ಕಳಿಗೆ ಗೌರವ ಕೊಡಬೇಕು. ಪ್ರೀತಿಯಿಂದಲೇ ತಿದ್ದಬೇಕು ಎಂಬ ಆದರ್ಶವಷ್ಟೇ ಪ್ರಮುಖವಾಗಿದೆ. ತಾವೇ ಗೌರವಿಸಲ್ಪಡಬೇಕಾದವರು ಎಂಬುದನ್ನಷ್ಟೇ ಮಕ್ಕಳು ಕಲಿತರೆ ಹಿರಿಯರನ್ನು, ಗುರುಗಳನ್ನು ಗೌರವಿಸುವುದನ್ನು ಅವರು ಕಲಿಯುತ್ತಾರಾ ಹೇಳು? ವ್ಯವಸ್ಥೆಗಳು ಬದಲಾಗುತ್ತಾ ಆಗುತ್ತಾ ನಮ್ಮ ತಲೆಮಾರಿನವರ ಕಥೆ ಹೇಗಿದೆಯೆಂದರೆ ನಮ್ಮ ಹೆತ್ತವರಿಗೆ ಗೌರವ ನೀಡುತ್ತಾ, ಸಾಕಷ್ಟು ಸಂದರ್ಭದಲ್ಲಿ ಅವರ ಕುರಿತು ಒಂದು ಸಣ್ಣಭಯವನ್ನೂ ಇಟ್ಟುಕೊಳ್ಳುತ್ತಾ ಬೆಳೆದೆವು.
ಈಗ ಮಕ್ಕಳಿಗೆ ಹೆದರಿ ಬದುಕುವ ಪರಿಸ್ಥಿತಿ. ಮಕ್ಕಳ ಮನಸ್ಸು ಸೂಕ್ಷö್ಮ ಎಂಬುದರ ಕಡೆಗಷ್ಟೇ ನಮ್ಮ ಧ್ಯಾನ. ಇಂಥ ಸನ್ನಿವೇಶಗಳಲ್ಲಿ ಎಲ್ಲ ಒತ್ತಡ ಬೀಳುತ್ತಿರುವುದು ಪೋಷಕರ ಮೇಲೆಯೇ ಮಗೂ. ಅವರ ನೋವು ಸಂಕಟಗಳು ಮಾತ್ರ ಯಾರಿಗೂ ಬೇಡ. ಎಷ್ಟೋ ಕಡೆಗಳಲ್ಲಿ ನಲುವತ್ತರ ಹರೆಯದವರು ಅಕಾಲಿಕವಾಗಿ ಹೃದಯಾಘಾತದಿಂದ ನಿರ್ಗಮಿಸುತ್ತಿರುವುದನ್ನು ನೋಡಿದರೆ ಇಷ್ಟೆಲ್ಲ ಒತ್ತಡವನ್ನು ಅನುಭವಿಸಿ ಹೃದಯದ ಮೇಲೆ ಇನ್ನಿಲ್ಲದ ಒತ್ತಡ ತಂದುಕೊAಡದ್ದು ನಮ್ಮ ಮೂರ್ಖತನ ಅನಿಸುತ್ತದೆ ಮಗೂ. ಇದನ್ನು ನಿನ್ನಲ್ಲಿ ಹೇಳಬೇಕೆನಿಸಿತು. ನಿನಗೆಷ್ಟು ಅರ್ಥವಾದೀತೋ ನನಗ್ಗೊತ್ತಿಲ್ಲ. ಆದರೆ ನಿನ್ನ ಪ್ರಬುದ್ಧತೆಯ ಬಗ್ಗೆ ನನಗೆ ಹೆಮ್ಮೆಯಿದೆ.
ಹಾಂ, ಬದಲಾಗುವವರ ಬಗೆಗೆ ಹೇಳುತ್ತಿದ್ದೆ ಅಲ್ವಾ? ಈಗೀಗ ನಿಜಕ್ಕೂ ಯಾರು ನಮ್ಮವರು, ಯಾರು ನಮ್ಮೊಂದಿಗೆ ಒಳ್ಳೆಯವರಂತೆ ನಟಿಸುತ್ತಿರುವವರು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಯಾಕೋ ಬಹಳ ಕಷ್ಟವೆನಿಸಿದೆ ಮಗೂ. ನಮ್ಮೆದುರು ಅವರು ನಡೆದುಕೊಳ್ಳುವ ರೀತಿ, ನಮ್ಮ ಬೆನ್ನ ಹಿಂದೆ ನಡೆದುಕೊಳ್ಳುವ ರೀತಿ ತೀರಾ ವಿರುದ್ಧ. ಬಾಯ್ತೆರೆದರೆ ಚಿಮ್ಮುವ ಸುಳ್ಳುಗಳ ಕಂತೆ. ನೋಡಿ ನೋಡಿ, ಕೇಳಿಕೇಳಿ ಸಾಕಾಗಿ ಹೋಗಿದೆ ನನಗೆ.
ಯಾರನ್ನು ನಂಬಬೇಕೋ ಯಾರನ್ನು ನಂಬಬಾರದೋ ಎಂದು ತಿಳಿಯದೇ ಇರುವ ಸ್ಥಿತಿಯಿದೆಯಲ್ಲ, ಅದಕ್ಕಿಂತ ದೊಡ್ಡ ನರಕವಿನ್ನೇನಿದೆ ಅನಿಸುತ್ತದೆ ಕೆಲವೊಮ್ಮೆ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಎಲ್ಲರೂ ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ನೋಡುವವರು! ಇನ್ನೂ ಟ್ರೆಂಡೀ ಭಾಷೆಯಲ್ಲಿ ಹೇಳಬೇಕೆಂದರೆ ‘ಬಕೆಟ್ ಹಿಡಿಯುವವರು’! ಎಲ್ಲರಿಗೂ ಹಿಡಿದೂ ಹಿಡಿದೂ ತೂತುಬಿದ್ದ ಬಕೆಟನ್ನೇ ಹೊಚ್ಚಹೊಸದರಂತೆ ನಮ್ಮೆದುರೂ ಹಿಡಿದರೆ ಏನು ಮಾಡಬೇಕು ಹೇಳು?
ಮಗಳೇ, ಪ್ರತಿಯೊಬ್ಬನೂ ತನ್ನದಾದ ಒಂದು ಚೆಂದದ ವ್ಯಕ್ತಿತ್ವವನ್ನು ಕಟ್ಟಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಬಾಳಿದರೆ ಎಷ್ಟು ಚಂದ! ಅದನ್ನು ಬಿಟ್ಟು ತಾವು ಎಲ್ಲರಿಗೂ ಆಪ್ತರೆಂದು ತೋರಿಸಿಕೊಳ್ಳುವುದು, ಅದಕ್ಕಾಗಿ ಬಾಳ್ವೆಯ ಅಮೂಲ್ಯ ಕ್ಷಣಗಳನ್ನು ವ್ಯರ್ಥ ಮಾಡುವುದು, ಅಷ್ಟನ್ನೇ ಜೀವನ ಎಂದುಕೊAಡಿರುವವರನ್ನು ಕಂಡರೆ ಸಂಕಟವಾಗುತ್ತದೆ. ನಮ್ಮಲ್ಲಿ ಸಮಯವಿದೆಯೆಂದರೆ ಉತ್ತಮ ಹವ್ಯಾಸವೊಂದನ್ನು ರೂಪಿಸಿಕೊಳ್ಳಬಹುದು, ಕಲೆ, ಸಾಹಿತ್ಯ, ಸಂಗೀತ.. ಆಟೋಟ..ಎಷ್ಟೆಲ್ಲ ಆಯ್ಕೆಗಳಿವೆ ಎದುರು?
ಕಾಲದೊಂದಿಗೆ ಓಡಬೇಕು ನಿಜ ಮಗೂ. ಆದರೆ ಎಲ್ಲರ ಓಟದ ಪಥ ನಮಗೆ ಹಿಡಿಸುವಂಥದ್ದಲ್ಲ ಅಂತ ಅರಿವಾದ ಮೇಲೂ ಅವರೊಂದಿಗೆ ಓಡಲು ಹೆಣಗಾಡುವುದಕ್ಕಿಂತ ಸರಿಯಾದ ದಾರಿಯಲ್ಲಿ ನಿಧಾನವಾಗಿಯೇ ಸಾಗುವುದೊಳ್ಳೆಯದು. ಪ್ರಾರಂಭದಲ್ಲಿ ಒಂಟಿ ಅನ್ನಿಸಬಹುದು. ಬರಬರುತ್ತಾ ನಮ್ಮಂಥರೊAದಷ್ಟು ಮಂದಿ ಸಿಕ್ಕೇ ಸಿಗುತ್ತಾರೆ. ಅವರನ್ನು ಜತೆಗೂಡಿಕೊಳ್ಳಬಹುದು. ಬದುಕಿನ ರೀತಿಯೇ ಹಾಗೆ ಮಗೂ. ಸತ್ವಯುತವಾದದ್ದು ಉಳಿಯುತ್ತದೆ. ಜಳ್ಳುಕಾಳುಗಳು ಗಾಳಿಯಲ್ಲಿ ತೂರಿಹೋಗುತ್ತವೆ. ನಮ್ಮ ಪ್ರಯತ್ನ ಸತ್ವಯುತವಾಗುವ ಕಡೆಗಿರಲಿ ಮಗೂ. ನಮಗಂತೂ ನಾಟಕವಾಡುವುದಕ್ಕೆ ಯಕ್ಷಗಾನ ರಂಗಸ್ಥಳವಿದೆ, ಬೇರೆಬೇರೆ ಪಾತ್ರಗಳಿವೆ. ರಂಗದ ಮೇಲಿನ ನಾಟಕ ನಿಜಬದುಕಿಗೆ ಬರದಂತೆ ಸಣ್ಣ ಎಚ್ಚರವಿರಬೇಕು ಅಷ್ಟೇ.
ಮಗಳೇ, ನೀನಿಡುವ ಒಂದೊAದು ಹೆಜ್ಜೆಯನ್ನೂ ಅತ್ಯಂತ ಜಾಗ್ರತೆಯಿಂದ ಇಡು. ನೈಜ ಯಾವುದು, ನಟನೆ ಯಾವುದು ತಿಳಿಯುವ ಶಕ್ತಿಯನ್ನು ಭಗವಂತ ನಿನಗೆ ಕೊಡಲಿ. ನೀನೆಂದAತೆ ತಕ್ಕ ಮಟ್ಟಿಗಾದರೂ ಬದಲಾಗುವುದು ನನ್ನಿಂದಾದೀತಾ ನೋಡುವೆ..
ಇಂತೀ ಆಶೀರ್ವಾದಗಳೊಂದಿಗೆ ಅಮ್ಮ
