Tumkur News: ಡಿಜಿಟಲ್ ಮಾಧ್ಯಮವು ಮುಂದಿನ ದಿನಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಯಶಸ್ಸು ಕಾಣಲಿದೆ. ಸಾಂಪ್ರದಾಯಿಕ ಮಾಧ್ಯಮಗಳಿಗಿಂತ ಡಿಜಿಟಲ್ ಮಾಧ್ಯಮವು ಹೆಚ್ಚು ಮಂದಿಯನ್ನು ತುಂಬ ವೇಗವಾಗಿ ತಲುಪುವ ಗುಣವೇ ಇದಕ್ಕೆ ಕಾರಣ ಎಂದು ಪ್ರೈಮ್ ಕನ್ನಡ ಡಿಜಿಟಲ್ ಮಾಧ್ಯಮದ ಸಂಪಾದಕ ರವಿತೇಜ ಚಿಗಳಿಕಟ್ಟೆ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಬುಧವಾರ ಹಮ್ಮಿಕೊಂಡಿದ್ದ ‘ಆರಂಭ-2025’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಳೆದ ಎರಡು ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಹೆಚ್ಚು ಮಂದಿಯನ್ನು ಪರಿಣಾಮಕಾರಿಯಾಗಿ ತಲುಪುತ್ತಿದೆ. ವೆಬ್ ಮಾಧ್ಯಮ, ವಿವಿಧ ಬಗೆಯ ಆ್ಯಪ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪುವುದು ಈಗ ಸುಲಭವಾಗಿದೆ. ಆರ್ಥಿಕವಾಗಿಯೂ ಈ ಮಾಧ್ಯಮಗಳು ಯಶಸ್ಸು ಕಾಣಲಾರಂಭಿಸಿವೆ ಎಂದು ಹೇಳಿದರು.
ಮಾಧ್ಯಮರಂಗದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಕೌಶಲ ಮುಖ್ಯ. ಅದರಲ್ಲೂ ಡಿಜಿಟಲ್ ಮಾಧ್ಯಮಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಅನೇಕ ಕೌಶಲಗಳನ್ನು ಏಕಕಾಲದಲ್ಲಿ ಪ್ರಯೋಗಿಸುವ ಕೌಶಲ ಇರಬೇಕು. ಉತ್ತಮ ಕಂಟೆಂಟ್ ನಿರಂತರವಾಗಿ ನೀಡುವುದು ಡಿಜಿಟಲ್ ಮಾಧ್ಯಮದ ಪ್ರಮುಖ ಸವಾಲು ಎಂದರು.
ಡಿಜಿಟಲ್ ಮಾಧ್ಯಮಗಳು ಸ್ಥಳೀಯ ಸಮಸ್ಯೆಗಳಿಗೆ ದನಿಯಾದಾಗ ಹೆಚ್ಚು ಜನರ ಬೆಂಬಲ ದೊರೆಯುತ್ತದೆ. ಟೀಕೆಗಳನ್ನು ಮಾಡಿದಾಗ ರಾಜಕೀಯ ಮತ್ತಿತರ ಒತ್ತಡಗಳು ಬರುವುದು ಸಹಜ. ಅವನ್ನು ಸೂಕ್ತ ರೀತಿಯಲ್ಲಿ ಎದುರಿಸಬೇಕು. ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವುದಕ್ಕೂ ಡಿಜಿಟಲ್ ಮಾಧ್ಯಮ ಉತ್ತಮ ವೇದಿಕೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ಕೆ.ವಿ., ಉತ್ತರದಾಯಿತ್ವ ಮತ್ತು ವಿಶ್ವಾಸಾರ್ಹತೆಗಳನ್ನು ಉಳಿಸಿಕೊಂಡರೆ ಮಾತ್ರ ಡಿಜಿಟಲ್ ಮಾಧ್ಯಮಕ್ಕೆ ಭವಿಷ್ಯವಿದೆ. ಮಾಧ್ಯಮವೃತ್ತಿಯ ಮೂಲತತ್ವಗಳನ್ನು ಬಿಡದೆ ಸಮಾಜಕ್ಕೆ ಒಳ್ಳೆಯದನ್ನು ಮಾಡುವುದಕ್ಕೆ ಅವಕಾಶ ಮುಕ್ತವಾಗಿದೆ ಎಂದು ತಿಳಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ಡಾ. ಪೃಥ್ವಿರಾಜ ಟಿ., ಡಾ. ಸುಲೋಚನ ಜಿ.ಎಸ್., ವಿಷ್ಣುಧರನ್ ಉಪಸ್ಥಿತರಿದ್ದರು. ಛಾಯಾ ಬಿ. ನಿರೂಪಿಸಿದರು. ಮಂದಾರ ಸಿ. ಆರ್. ಸ್ವಾಗತಿಸಿದರು. ದೀಪಾ ಕೆ.ಎಸ್. ವಂದಿಸಿದರು.
