ಕುಮಟಾ: ತೀರ್ಥಯಾತ್ರೆ ಮುಗಿಸಿ ಕುಮಟಾಕ್ಕೆ ಮರಳುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕುಟುಂಬವೊಂದು ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಭಯಾನಕ ದರೋಡೆಕೋರರ ದಾಳಿಗೆ ಒಳಗಾಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಪ್ರಾಣಾವಾಯದಿಂದ ಪಾರಾಗಿದ್ದಾರೆ. ದುಷ್ಕರ್ಮಿಗಳು ಚಲಿಸುತ್ತಿದ್ದ ವಾಹನದ ಮೇಲೆ ಹಾರಿ ದರೋಡೆಗೆ ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.(Robbery Attempt)
ಚಲಿಸುವ ವಾಹನದ ಮೇಲೆ ದಾಳಿ
ಕುಮಟಾ ತಾಲೂಕಿನ ಕತಗಾಲ ಮಾಸ್ತಿಹಳ್ಳಿ ಮೂಲದ ಕುಟುಂಬವೊಂದು ಸ್ಥಳೀಯ ಗಜಾನನ ಟ್ರಾವೆಲ್ಸ್’ನ ಟಿಟಿ ವಾಹನದಲ್ಲಿ (ಟೆಂಪೋ ಟ್ರಾವೆಲರ್) ಶಿರಡಿ ಹಾಗೂ ಅಯೋಧ್ಯೆ ಪ್ರವಾಸ ಮುಗಿಸಿ ಹಿಂತಿರುಗುತ್ತಿತ್ತು,
ಶುಕ್ರವಾರ ರಾತ್ರಿ ಸೊಲ್ಲಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಈ ಘಟನೆ ನಡೆದಿದೆ. ಮೂರು ಬೈಕ್ಗಳಲ್ಲಿ ಹಿಂಬಾಲಿಸಿದ ದರೋಡೆಕೋರರು, ಟಿಟಿ ವಾಹನದ ಹಿಂದಿನ ಬಾಗಿಲಿಗೆ ಜಿಗಿದು ಒಳನುಗ್ಗಲು ಪ್ರಯತ್ನಿಸಿದ್ದಾರೆ.(Robbery Attempt) ಈ ವೇಳೆ ವಾಹನದೊಳಗೆ ಆತಂಕ ಸೃಷ್ಟಿಯಾಗಿದೆ. ಒಳನುಗಿದವರು ಹಿಂಬದಿಯಲ್ಲಿದ್ದ ಕೆಲವು ಬ್ಯಾಗ್ಗಳನ್ನು ಎಳೆದು ರಸ್ತೆಗೆ ಎಸೆದಿದ್ದಾರೆ.
ಚಾಲಕನ ದಿಟ್ಟತನ
ದರೋಡೆಕೋರರ ದಾಳಿಯನ್ನು ಗಮನಿಸಿದ ಚಾಲಕ ಗಣಪತಿ ನಾಯ್ಕ ತಕ್ಷಣವೇ ವಾಹನ ನಿಲ್ಲಿಸಿದ್ದಾರೆ. ವಾಹನ ನಿಂತ ಕೂಡಲೇ ಕಳ್ಳರು ವಾಹನವನ್ನು ಸುತ್ತುವರಿದು ಸಂಪೂರ್ಣ ಲೂಟಿ ಮಾಡಲು ಮುಂದಾಗಿದ್ದಾರೆ.(Robbery Attempt)
ಈ ವೇಳೆ, ಧೈರ್ಯಗೆಡದ ಚಾಲಕ ಗಣಪತಿ ನಾಯ್ಕ ಅವರು ವಾಹನದಲ್ಲಿದ್ದ ಅಡುಗೆಗೆ ಬಳಸುವ ಆಯುಧವನ್ನು ಕೈಯಲ್ಲಿ ಹಿಡಿದು ಅವರನ್ನು ಎದುರಿಸಲು ಮುಂದಾಗಿದ್ದಾರೆ. ಚಾಲಕನ ಈ ದಿಟ್ಟ ವರ್ತನೆ ಮತ್ತು ಪ್ರತಿದಾಳಿಯ ಭೀತಿಯಿಂದ ದರೋಡೆಕೋರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ
ದರೋಡೆಕೋರರು ಕದ್ದೊಯ್ದ ಬ್ಯಾಗ್ಗಳಲ್ಲಿ ಬಟ್ಟೆಗಳಿದ್ದವೇ ಹೊರತು ನಗದು ಅಥವಾ ಚಿನ್ನಾಭರಣಗಳು ಇರಲಿಲ್ಲ ಪ್ರಾಣಾಪಾಯದಿಂದ ಪಾರಾದ ಕಾರಣ, ಕುಟುಂಬವು ದೂರು ನೀಡದೆ ತಮ್ಮ ಪ್ರಯಾಣವನ್ನು ಕುಮಟಾದತ್ತ ಮುಂದುವರಿಸಿದೆ.
ಹೆದ್ದಾರಿ 52ರಲ್ಲಿ ಪ್ರವಾಸಿಗರಿಗೆ ಎಚ್ಚರಿಕೆ
ಮಹಾರಾಷ್ಟ್ರದ ಈ ಹೆದ್ದಾರಿ 52ರಲ್ಲಿ ಈ ರೀತಿಯ ದರೋಡೆ ಯತ್ನಗಳು ಹೊಸತಲ್ಲ. ಈ ಹಿಂದೆ ಮೈಸೂರು ಮತ್ತು ಮಂಗಳೂರಿನ ಪ್ರವಾಸಿಗರೂ ಇದೇ ಅನುಭವವನ್ನು ಎದುರಿಸಿದ್ದಾರೆ ಎಂದು ತಿಳಿದುಬಂದಿದೆ.(Robbery Attempt)
ದರೋಡೆಕೋರರ ಗುಂಪು ಸಾಮಾನ್ಯವಾಗಿ ರಾತ್ರಿ ವೇಳೆ ಸಂಚರಿಸುವ ಪ್ರವಾಸಿ ವಾಹನಗಳನ್ನೇ ಗುರಿಯಾಗಿಸುತ್ತದೆ. ಅಪಘಾತವಾದಂತೆ ನಟಿಸಿ ವಾಹನ ನಿಲ್ಲಿಸಿ ಲೂಟಿ ಮಾಡುವುದು ಅವರ ಹಳೆಯ ತಂತ್ರವಾಗಿದ್ದರೆ, ಇತ್ತೀಚೆಗೆ ಚಲಿಸುವ ವಾಹನಗಳ ಮೇಲೆ ಹಾರಿ ದಾಳಿ ಮಾಡುವ ಹೊಸ ವಿಧಾನವನ್ನು ಬಳಸುತ್ತಿದ್ದಾರೆ.
