ಪುತ್ತೂರು: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ಶೂಟೌಟ್ ಮಾಡಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಶಾಸಕ ಅಶೋಕ್ ರೈ ಅಭಿನಂದಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಶಾಸಕರು’ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಪೊಲೀಸರು ಕಡಿವಾಣ ಹಾಕುತ್ತಿದ್ದಾರೆ. ಸಮಾಜದಲ್ಲಿ ಸಂಘರ್ಷಕ್ಕೆ ಕಾರಣವಾಗುವ ಗೋಸಾಗಾಟ ಪ್ರಕರಣಕ್ಕೆ ಪೊಲೀಸರು ಅಲ್ಲಲ್ಲಿ ಬ್ರೇಕ್ ಹಾಕುತ್ತಿದ್ದಾರೆ ಈ ನಡುವೆ ಇಲಾಖೆಯ ಕಣ್ಣು ತಪ್ಪಿಸಿ ಕೇರಳಕ್ಕೆ ಗೋವುಗಳ ಅಕ್ರಮ ಸಾಗಾಟ ಮಾಡುತ್ತಿದ್ದ ವರ ಮೇಲೆ ಪೊಲೀಸರು ಶೂಟೌಟ್ ಮಾಡಿ ಬಂಧಿಸಿರುವುದು ಅಭಿನಂದನಾರ್ಹವಾಗಿದೆ ಮುಂದೆ ಅಕ್ರಮ ಚಟುವಟಿಕೆ ಮಾಡುವ ಎಲ್ಲರಿಗೂ ಪಾಠವಾಗಬೇಕು ಎಂದು ಹೇಳಿದರು.
ಈಗ ಕಾಲಿಗೆ ಗುಂಡು ಬಿದ್ದಿದೆ.ಮುಂದೆ ಎಲ್ಲೆಲ್ಲಿಗೋ ಬೀಳಬಹುದು ಅಂದ ಅವರು ಒಂದಿಬ್ಬರಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ. ಇಲ್ಲಿಯವರು ಈ ಕೃತ್ಯ ಮಾಡಿಲ್ಲ,ಕೇರಳದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಆದರೆ ಒಂದಿಬ್ಬರು ವ್ಯಕ್ತಿಗಳು ಮಾಡುವ ತಪ್ಪಿಗೆ ಇಡೀ ಸಮುದಾಯದಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ. ಎಲ್ಲಾ ಸಮುದಾಯದಲ್ಲಿ ಒಳ್ಳೆಯವರೂ ಇದ್ದಾರೆ ಕೆಟ್ಟವರೂ ಇದ್ದಾರೆ. ಅಕ್ರಮ ಚಟುವಟಿಕೆಗಳಿಗೆ ಯಾರೂ ಬೆಂಬಲ ಕೊಡುವುದಿಲ್ಲ ಎಂದು ಹೇಳಿದರು.
ಫೋಸು ಕೊಡುವುದು ಬೇಡ:
ಶೂಟೌಟ್ ಸ್ಥಳಕ್ಕೆ ಬಂದು ಗೋರಕ್ಷಣೆ ಹೆಸರಲ್ಲಿ ಫೊಟೋ ಫೋಸ್ ಕೊಡುವುದು ಬೇಡ. ಕೆಲವರು ಬಂದು ಫೋಸ್ ಕೊಟ್ಟಿದ್ದ ವಿಚಾರ ಗಮನಕ್ಕೆ ಬಂದಿದೆ. ಅಕ್ರಮ ಗೋವುಸಾಗಾಟದಾರನ ಮೇಲೆ ಶೂಟೌಟ್ ಮಾಡಿರುವುದು ಮತ್ತು ಅವುಗಳ ರಕ್ಷಣೆ ಮಾಡಿರುವುದು ಕಾಂಗ್ರೆಸ್ ಸರಕಾರ ಎಂಬುದನ್ನು ಫೋಸ್ ಕೊಡುವವರು ತಿಳಿದುಕೊಳ್ಳಬೇಕು. ಗೋವುಗಳ ರಕ್ಷಣೆ ಮಾಡಲು ಕಾಂಗ್ರೆಸ್ ಸರಕಾರದಿಂದ ಮಾತ್ರ ಸಾಧ್ಯ ಎಂದು ಶಾಸಕರು ಹೇಳಿದರು.
