ತುಮಕೂರು: ಲಯಬದ್ಧ ಸಂಗೀತ, ಸಾಹಿತ್ಯ, ನಾಟ್ಯ, ವರ್ಣರಂಜಿತ ವೇಷಭೂಷಣ, ರಂಗಚಲನೆ ಎಲ್ಲ ಅಂಗಗಳನ್ನು ಒಳಗೊಂಡಿರುವ ಯಕ್ಷಗಾನ(Yakahagana) ವೈವಿಧ್ಯತೆಯ ಸಮಪಾಕ ಎಂದು ವಿದ್ವಾಂಸ ಟಿ. ಮುರಳಿಕೃಷ್ಣಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಯಕ್ಷದೀವಿಗೆ ಸಹಯೋಗದಲ್ಲಿ ನಗರದ ಶ್ರೀಕೃಷ್ಣಮಂದಿರದಲ್ಲಿ ರಾಜ್ಯಮಟ್ಟದ ‘ಮಹಿಳಾ ಯಕ್ಷಸಂಭ್ರಮ’ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ನಾನಾ ಶಾಸ್ತ್ರಗ್ರಂಥಗಳ, ಧರ್ಮಗಳ ಧ್ಯೇಯವನ್ನು ಒಳಗೊಂಡಿರುವ ಯಕ್ಷಗಾನವು(Yakahagana) ತನ್ನ ವಿಭಿನ್ನ ಮತ್ತು ವಿಶಿಷ್ಟ ಗುಣದಿಂದ ಜನರಿಗೆ ಮಾಹಿತಿ, ಜಾಗೃತಿ, ಅಧ್ಯಾತ್ಮ ಜ್ಞಾನ, ಮನರಂಜನೆಯನ್ನು ನೀಡುತ್ತದೆ ಎಂದರು.
ಯಾವ ನಡವಳಿಕೆ, ತಿಳುವಳಿಕೆ, ಅನುಭವ ಉನ್ನತ ದೃಷ್ಟಿಯೆಡೆಗೆ ಕರೆದುಕೊಂಡು ಹೋಗುತ್ತದೆಯೋ ಅದು ಒಳ್ಳೆಯದು. ಯಕ್ಷಗಾನ ಈ ಬಗೆಯ ವಿವೇಚನಾಶಕ್ತಿಯನ್ನು ಸಮಾಜಕ್ಕೆ ನೀಡುತ್ತದೆ. ಬಯಲುಸೀಮೆಯಲ್ಲಿ ಇಂತಹ ಶ್ರೇಷ್ಠ ಕಲೆಯ ಆಸಕ್ತಿಯನ್ನು ದಶಕದಿಂದ ಪೋಷಿಸುತ್ತಿರುವ ಯಕ್ಷದೀವಿಗೆಯ ಶ್ರಮ ಶ್ಲಾಘನೀಯ ಎಂದರು.
ಯಕ್ಷಗಾನ ಅಕಾಡೆಮಿ ಸದಸ್ಯ ಎ.ಆರ್. ಪುಟ್ಟಸ್ವಾಮಿ ಅರಳಗುಪ್ಪೆ ಮಾತನಾಡಿ, ಯಕ್ಷಗಾನವು ಕೇವಲ ಕಲೆಯಾಗದೆ ಯೋಗ, ವ್ಯಾಯಾಮದಂತೆ ಮಾನಸಿಕವಾಗಿ ದೈಹಿಕವಾಗಿ ಉತ್ತಮ ಅರೋಗ್ಯ ನೀಡುತ್ತದೆ. ಇತ್ತೀಚಿಗೆ ಪ್ರಾಚೀನ ಕಲೆಗಳು ಮರೆಯಾಗುತ್ತಿದ್ದು ಎಲ್ಲರೂ ಅವುಗಳನ್ನು ಬೆಳೆಸಿ, ಪ್ರೋತ್ಸಾಹಿಸಬೇಕು, ವಿದ್ಯಾರ್ಥಿಗಳು ಓದುವುದರ ಜೊತೆಗೆ ಇಂತಹ ಕಲೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಮಿತ್ರವೃಂದದ ಅಧ್ಯಕ್ಷರಾದ ಅಮರನಾಥ ಶೆಟ್ಟಿ ಮಾತನಾಡಿ, ಗ್ರಾಮೀಣ ಕಲೆಗಳಿಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಯಕ್ಷಗಾನದ ಕಂಪು ದೇಶ ವಿದೇಶಗಳಲ್ಲಿ ಹರಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಕಮಲಾ ನರಸಿಂಹ ಉಪಸ್ಥಿತರಿದ್ದರು. ಯಕ್ಷದೀವಿಗೆಯ ಅಧ್ಯಕ್ಷೆ ಡಾ.ಆರತಿ ಪಟ್ರಮೆ ಸ್ವಾಗತಿಸಿದರು. ಕೋಶಾಧಿಕಾರಿ ಡಾ. ಸಿಬಂತಿ ಪದ್ಮನಾಭ ವಂದಿಸಿದರು. ಉಪನ್ಯಾಸಕಿ ಡಾ. ಸುಲೋಚನ ಜಿ.ಎಸ್. ನಿರೂಪಿಸಿದರು.
‘ಯಕ್ಷಗಾನ ಮತ್ತು ಮಹಿಳೆ’ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಯಕ್ಷಗಾನ ಕಲಾವಿದೆ ಶಾಲಿನಿ ಹೆಬ್ಬಾರ್ ‘ಮಹಿಳೆಯರಿಗೆ ಯಕ್ಷಗಾನ ಹಿಮ್ಮೇಳ ಕಲಿಕೆಯ ಅವಕಾಶಗಳು ಮತ್ತು ಸವಾಲುಗಳು’ ಕುರಿತು, ಶಿಕ್ಷಕಿ ಸೌಮ್ಯಾ ಪ್ರದೀಪ್ ಹೆಬ್ಬಾರ್ ‘ಯಕ್ಷಗಾನೇತರ ಪ್ರದೇಶಗಳಲ್ಲಿ ಮಹಿಳೆಯರು ಎದುರಿಸುವ ಯಕ್ಷಗಾನ ಕಲಿಕೆಯ ಸವಾಲುಗಳು’ ಕುರಿತು, ಮೂಡಬಿದ್ರೆಯ ಆಳ್ವಾಸ್ ಪ.ಪೂ. ಕಾಲೇಜಿನ ಉಪನ್ಯಾಸಕಿ ಡಾ. ದಿವ್ಯಶ್ರೀ ಡೆಂಬಳ ‘ಸ್ತ್ರೀ ಕೇಂದ್ರಿತ ಯಕ್ಷಗಾನ ಪ್ರಸಂಗಗಳ ಅಗತ್ಯ, ಆಶಯ ಮತ್ತು ಸಾಧ್ಯತೆಗಳು’ ಕುರಿತು ವಿಚಾರಮಂಡಿಸಿದರು.
ಬಳಿಕ ‘ಕರ್ಣಾರ್ಜುನ ಕಾಳಗ’ ತಾಳಮದ್ದಳೆ, ‘ಪಂಚವಟಿ’ ಬಡಗುತಿಟ್ಟು ಯಕ್ಷಗಾನ, ‘ತರಣಿಸೇನ ಕಾಳಗ’ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗಳು ನಡೆದವು. ಡಾ. ಕಮಲಾ ನರಸಿಂಹ, ಡಾ. ಜಿ. ಗಿರಿಜಮ್ಮ, ಸುಮಾ ಬೆಳಗೆರೆ ಯಕ್ಷಗಾನಗಳಿಗೆ ಪ್ರತಿಕ್ರಿಯೆ ನೀಡಿದರು.
